ಸ್ವಾಮಿ ವಿವೇಕಾನಂದರ ಕುರಿತು



ರಾಷ್ಟ್ರಪಿತ ಮಹಾತ್ಮಾ ಗಾಂಧಿ ಒಂದು ಮಾತು ಹೇಳಿದ್ದಾರೆ. ‘ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ  ಸ್ವಾಮಿ ವಿವೇಕಾನಂದರನ್ನು ಓದಿ’ ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ.

ಸಂಸ್ಕೃತಿ ಎಂದರೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನನ್ನ ಮಿತ್ರರೊಬ್ಬರು ಸಂಸ್ಕೃತಿಯ ಬಗ್ಗೆ ಹೀಗೆ ಹೇಳುತ್ತಿದ್ದರು. ಹೂವಿನ ಗಿಡವೊಂದರಲ್ಲಿ ಹೂವು ಬಿಡುತ್ತದೆ. ಅದು ಪ್ರಕೃತಿ, ಅದೇ ಹೂವನ್ನು ಯಾರಾದರೂ ಕಿಡಿಗೇಡಿಗಳು ಕಿತ್ತು ಎಸೆದರೆ ಅದು ವಿಕೃತಿ, ಅದೇ ಗಿಡದಲ್ಲಿರುವ ಹೂವನ್ನು ಗಿಡಕ್ಕೂ ನೋವಾಗದಂತೆ ಕಿತ್ತು, ಅದಕ್ಕೆ ನೀರು ಚುಮುಕಿಸಿ ಪರಿಶುದ್ಧಗೊಳಿಸಿ ದಾರದ ನೆರವಿನಿಂದ ಮಾಲೆ ಕಟ್ಟಿದರೆ ಅದಾಗುತ್ತದೆ ಆಕೃತಿ. ಆ ಆಕೃತಿಯನ್ನು ನಾವು ದೇವರ ವಿಗ್ರಹಕ್ಕೂ, ನಮ್ಮ ಪೂಜ್ಯ ಮಾತಾ ಪಿತೃಗಳ ಪದಕಮಲಕ್ಕೋ ಅರ್ಪಿಸುತ್ತೇವಲ್ಲ ಅದು ನಮ್ಮ ಸಂಸ್ಕೃತಿ ಎಂದು.

ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಭಾಷಣ ಕೇಳಿದ ಬಳಿಕ ಅಮೆರಿಕದ ಪ್ರಮುಖ ಪತ್ರಿಕೆ ಹೀಗೆ ಬರೆಯಿತು. ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠ ವ್ಯಕ್ತಿ. ಅವರ ಭಾಷಣ ಕೇಳಿದ ಬಳಿಕ ಇಂತಹ ಸುಸಂಸ್ಕೃತರ ದೇಶಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳುಹಿಸುವುದು ಮೂರ್ಖತನವಾದೀತು.’’  ಸ್ವಾಮೀಜಿ ಅವರ ಭಾಷಣ ಭಾರತದ ಮೇಲೆ ಇಡೀ ವಿಶ್ವ ಸಮುದಾಯಕ್ಕಿದ್ದ ತಪ್ಪು ಕಲ್ಪನೆಗಳನ್ನು ದೂರ ಮಾಡಿತು. ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುವಂತೆ ಮಾಡಿತು. ಭಾರತದ ಬಗ್ಗೆ ವಿಶ್ವಕ್ಕೇ ಗೌರವ ಮೂಡಿಸಿದ ಆ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೇ?

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗೆ ಮಿಗಿಲಾದದ್ದು ಯಾವುದೂ ಇಲ್ಲ. ನನಗೆ ೧೦೦ಜನ ಗಟ್ಟಿ ಮುಟ್ಟಾದ ಚೈತನ್ಯ ಸ್ವರೂಪರಾದ ಯುವಕರನ್ನು ಕೊಡಿ ನಾವು ನವಭಾರತದ ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಸ್ವಾಮೀಜಿ.

ಯುವಕರು ಹೇಡಿಗಳಾಗಬಾರದು ಪುರುಷ ಸಿಂಹಗಳಾಗಬೇಕು, ನೀವು ಎಂದೂ ಪರಾವಲಂಬಿಗಳಾಗಬಾರದು, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮೀಜಿ ಅವರು ಯುವಜನರಿಗೆ ನೀಡಿರುವ ಒಂದೊಂದು ಸಂದೇಶವೂ ಒಂದೊಂದು ಜೀವನ ಧರ್ಮವಾಗಿದೆ.

ಹೀಗಾಗಿಯೇ ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ಅಕ್ಷರಶಃ  ರೋಮಾಂಚನವಾಗುತ್ತದೆ. ವಿವೇಕವಾಣಿಯನ್ನು ಕೇಳುತ್ತಿದ್ದರೆ, ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರೆ, ಮೈ ಪುಳಕಿತವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ತನುವಿನಲ್ಲಿ ಹೊಸ ಚೈತನ್ಯ ಒಡಮೂಡುತ್ತದೆ. ಇಂಥ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಓದಿದರೆ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ  ಮೂಡುವುದರ ಜೊತೆಗೆ ಸ್ವಾವಲಂಬನೆಯ, ಆತ್ಮಾಭಿಮಾನದ ಸಾಕ್ಷಾತ್ಕಾರವಾಗುತ್ತದೆ. ನಿಮ್ಮ ಜೀವನದ ಶಿಲ್ಪಿಗಳು ನೀವಾಗಬೇಕೆಂದರೆ, ಅಖಂಡ ಭಾರತದ ಪರಿಕಲ್ಪನೆಗಾಗಿ ವಿವೇಕಾನಂದರನ್ನೊಮ್ಮೆ ಓದಿ. ಅದುವೇ ನಿಮಗೊಂದು ದಿನವನ್ನು ಕಟ್ಟಿಕೊಟ್ಟ ಮಹಾಪುರುಷನಿಗೆ ನೀವು ನೀಡುವ ಅಪೂರ್ವ ಸಮರ್ಪಣೆ.


  • ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?

  • ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!

  • ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ.

  • ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು.

  • ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!